ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ ತಾಳಿ ಕಟ್ಟಿದ ಮಡದಿಯನ್ನು ಕ್ರೂರವಾಗಿ ಕೊಂದ


ಸಾಂದರ್ಭಿಕ ಚಿತ್ರ
ಹಾಸನ: ಅನುಮಾನ ಅನ್ನುವ ಭೂತ ತಲೆಯೊಳಗೆ ಹೊಕ್ಕಿಬಿಟ್ಟರೆ ಅದೆಂತಹ ಸಂಬಂಧಕ್ಕೂ ಅಲ್ಲಿ ಬೆಲೆ ಇರೋದಿಲ್ಲ, ದಶಕಗಳ ಸಹಬಾಳ್ವೆಗೂ ಅಲ್ಲಿ ನೆಲೆ ಇರೋದಿಲ್ಲ, ದಶಕದ ಹಿಂದೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳನ್ನೂ ಹೊಂದಿದ್ದ ಆ ದಂಪತಿ ನಡುವೆ ಪತಿಯ ತಲೆ ಹೊಕ್ಕಿದ್ದ ಅದೊಂದು ಅನುಮಾನ ಮಾಡಬಾರದ್ದನ್ನ ಮಾಡಿಸಿಬಿಟ್ಟಿದೆ.
ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ, ತನಗೆ ಸರಿಸಮಾನವಾಗಿ ಸಂಸಾರದ ನೊಗ ಹೊತ್ತಿದ್ದ ಮಡದಿಯ ಮೇಲೆ ಅನುಮಾನ ಪಡೋಕೆ ಶುರು ಮಾಡಿದ್ದ ಗಂಡ ಆಕೆ ಹೋದಲ್ಲೆಲ್ಲಾ ಹಿಂಬಾಲಿಸೋದು, ದುಡಿದ ಹಣದಲ್ಲಿ ಕುಡಿದು ಮಸ್ತಿ ಮಾಡೋದು, ಮತ್ತೆ ವ್ಯವಹಾರಕ್ಕೆ ತವರು ಮನೆಯಿಂದ ಹಣ ತಗೊಂಬಾ ಅಂತಾ ಪೀಡಿಸ್ತಿದ್ದನಂತೆ. ಹತ್ತಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮೊನ್ನೆ ಕೂಡ ರಾಜಿ ಸಂಧಾನದ ಮೂಲಕ ಮತ್ತೆ ಬದಲಾಗುವ ಮಾತು ಕೊಟ್ಟು ಬಂದಿದ್ದ ಗಂಡ, ಲೋನ್ ಆಗಿದೆ ಗಿರವಿ ಇಟ್ಟ ಒಡವೆ ಬಿಡಿಸೋಣ ಬಾ ಎಂದು ಪತ್ನಿಯನ್ನ ಕರೆಸಿಕೊಂಡಿದ್ದ. ಅರಣ್ಯ ಸಮೀಪ ಕರೆದೊಯ್ದು ಮನಸೋ ಇಚ್ಚೆ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಂದಿರುವ ನೀಚ ಪತಿ
ಮಗಳ ಬರ್ಬರ ಹತ್ಯೆ ಕಂಡ ಪೋಷಕರ ಆಕ್ರಂದನ.. ಹಾಡಹಗಲಿನಲ್ಲೇ ತಾಳಿ ಕಟ್ಟಿದ ಪತ್ನಿಯನ್ನ ಕ್ರೂರಾತಿಕ್ರೂರವಾಗಿ ಕೊಂದ ಗಂಡನ ವಿರುದ್ದ ಜನರ ಆಕ್ರೋಶ… ಅನುಮಾನದ ಭೂತ ತಲೆಗೇರಿಸಿಕೊಂಡವನಿಂದ ಅಮಾನುಷ ಕೃತ್ಯ.. ಹೌದು ಗಂಡ ಹೆಂಡಿರ ಸಂಬಂಧದಲ್ಲಿ ಅನುಮಾನ ಎನ್ನೋ ಭೂತ ತಲೆ ತೂರಿಸಿದರೆ ಅಲ್ಲಿ ಶಾಂತಿ ನೆಮ್ಮದಿ ಅನ್ನೋದು ಸುಳಿಯೋದಿಲ್ಲ. ಇಲ್ಲಿಯೂ ಗಂಡನೆಂಬ ಅನುಮಾನದ ಪಿಶಾಚಿಯೊಬ್ಬ ಮಡದಿಯನ್ನೇ ಬಲಿ ಪಡೆದುಕೊಂಡಿದ್ದಾನೆ.
ಕೂಡಲೆ ಆರೋಪಿ ಪತಿಯನ್ನು ವಶಕ್ಕೆ ಪಡೆದುಕೊಂಡ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಆತನೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ನಡೆದಿರೋ ಭೀಕರ ಹತ್ಯೆ ಪ್ರಕರಣ ಖಾತ್ರಿಯಾಗಿದೆ. ಇದೀಗ ಕೊಲೆ ಕೇಸ್ ದಾಖಲಿಸಿಕೊಂಡಿರೊ ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಮದುವೆಯಾದ ಹತ್ತು ವರ್ಷದಿಂದಲೂ ಇದೇ ರೀತಿಯಲ್ಲಿ ಕಿರುಕುಳ ಕೊಟ್ಟು ನಮ್ಮ ಮಗಳನ್ನ ಕೊಂದಿದ್ದಾನೆ. ಇಬ್ಬರು ಪುಟ್ಟ ಪುಟ್ಟ ಮಕ್ಕಳು ಅನಾಥವಾಗಿದ್ದಾರೆ, ವಿನಾಕಾರಣ ಪತ್ನಿಯನ್ನ ಕೊಂದ ಪಾಪಿಗೆ ಕಠಿಣ ಶಿಕ್ಷೆ ಆಗಬೇಕು, ಮಕ್ಕಳ ಭವಿಷ್ಯ ರೂಪಿಸಲು ಬೇಕಾದ ವ್ಯವಸ್ಥೆ ಆಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.