ಸ್ಥಳೀಯ ಸುದ್ದಿ

ನವಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ನಗರವನ ನಿರ್ಮಾಣಕ್ಕೆ ಚಾಲನೆ

ಧಾರವಾಡ

ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗವು ನವಲೂರು ಗ್ರಾಮ ವ್ಯಾಪ್ತಿ ಅರಣ್ಯ ಇಲಾಖೆಯ ಗುಡ್ಡದ ಪ್ರದೇಶದಲ್ಲಿ ಪ್ರಾರಂಭಿಸಿರುವ ಸಾಲು ಮರದ ತಿಮ್ಮಕ್ಕ ನಗರವನ ನಿರ್ಮಾಣಕ್ಕೆ ಇಂದು ಬೆಳಿಗ್ಗೆ ಗಣ್ಯರು ಚಾಲನೆ ನೀಡಿ ಆರಂಭಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ನಗರವನದಲ್ಲಿ ಸಸಿ ನೆಡುವ ಮೂಲಕ ಕೇಂದ್ರ ಪುರಸ್ಕ್ರತ ನಗರವನ ಯೋಜನೆಯಡಿ ಸಾಲು ಮರದ ತಿಮ್ಮಕ್ಕ ನಗರವನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಮಹಾನಗರ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಉದ್ಯಾನವನಗಳಲ್ಲಿ ಅರಣ್ಯೀಕರಣಗೊಳಿಸಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೂ, ಹಣ್ಣು ಮತ್ತು ಹಸಿರೆಲೆಗಳನ್ನು ಹೆಚ್ಚು ನೀಡುವ ಸಸಿಗಳನ್ನು ನಮ್ಮ ಉದ್ಯಾನವನಗಳಲ್ಲಿ ನೆಡಬೇಕು. ಇದರಿಂದ ಉದ್ಯಾನವನಗಳ ಒತ್ತುವರಿಯನ್ನು ತಪ್ಪಿಸಬಹುದು ಮತ್ತು ನಗರ ಸೌಂದರ್ಯಿಕರಣಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಧಾರವಾಡ ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಅವರು ಮಾತನಾಡಿ, ಭಾರತ ಸರ್ಕಾರವು ನಗರವನ ಯೋಜನೆಯಡಿ ನಗರ ಪ್ರದೇಶದಲ್ಲಿ ವನ ವೃದ್ಧಿಸಲು ಅನುದಾನ ನೀಡುತ್ತಿದೆ. ನಗರವನ ಯೋಜನೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ 75 ನಗರಗಳಲ್ಲಿ ನಗರವನ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯದ ಧಾರವಾಡ, ತುಮಕೂರು ಮತ್ತು ಬೆಂಗಳೂರಿನಲ್ಲಿ ನಗರವನ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಹಲವಾರು ಕಾರಣಗಳಿಂದ ಉಷ್ಣಾಂಶ ಹೆಚ್ಚಳವಾಗಿ ನೆಮ್ಮದಿಯಿಂದ ಜೀವನ ಸಾಗಿಸುವುದು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರವು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರವನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.

ಅದರಂತೆ ಧಾರವಾಡ ಜಿಲ್ಲೆಯ ನವಲೂರು ಸಾಲು ಮರದ ತಿಮ್ಮಕ್ಕ ನಗರವನವನ್ನು ಪ್ರಾರಂಭಿಸಲಾಗುತ್ತಿದೆ. ಈ ಪ್ರದೇಶವು ಒಟ್ಟು 58.29 ಹೆಕ್ಟರ್ ಭೂಮಿಯಿಂದ ಆವೃತವಾಗಿದೆ. ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವದರ ಮುಖಾಂತರ ನಗರವನ ಉದ್ಯಾನವನವನ್ನು ವಿದ್ಯುಕ್ತವಾಗಿ ಶಂಕು ಸ್ಥಾಪನೆ ಮಾಡಲಾಗಿದ್ದು, ನವಗ್ರಹ ವನ ಮತ್ತು ರಾಶಿ ವನಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸೋನಲ್ ವೃಷ್ಟಿ ತಿಳಿಸಿದರು.

ನಗರವನ ಯೋಜನೆಯಡಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಹಾಗೂ ಗಡಿ ಬಲವರ್ಧನೆಯಡಿ ಮುಳ್ಳುತಂತಿ ಬೇಲಿ ನಿರ್ಮಾಣ ಮಾಡಲಾಗುವುದು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಭದ್ರತೆ ಒದಗಿಸುವುದು ಮತ್ತು ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಉದ್ಯಾನವನದಲ್ಲಿ ವೃಕ್ಟೋದ್ಯಾನ ಯೋಜನೆಯಡಿ ದ್ವಾರಬಾಗಿಲು, ಸೂಚನಾ ಫಲಕಗಳು, ಪರಗೋಲಾ, ಚಿಕ್ಕ ಮಕ್ಕಳ ಆಟದ ಕ್ಷೇತ್ರದ ಅಭಿವೃದ್ಧಿ ಮತ್ತು ವೀಕ್ಷಣಾ ಗೋಪುರ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ನಗರ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತಡದ ಸನ್ನಿವೇಶದಲ್ಲಿ ಜೀವನ ಸಾಗಿಸುತ್ತಿರುವ ಜನರಿಗೆ ನೆಮ್ಮದಿ, ಹಸಿರೀಕರಣದ ಬಗ್ಗೆ ಆಸಕ್ತಿ ಹೆಚ್ಚಿಸುವುದು, ಶಾಂತವಾದ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಗರವನ ಯೋಜನೆ ರೂಪಿಸಲಾಗಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಗೆ ಧಾರವಾಡ ಜಿಲ್ಲೆಯ ಎಲ್ಲ ನಾಗರಿಕರು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆಗಳ ಸದಸ್ಯರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಹೇಳಿದರು.

ನಗರವನ ಚಾಲನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಪುಂಡಲೀಕಸಾ ಕಲಬುರ್ಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಪಾಲಿಕೆ ಸದಸ್ಯರಾದ ಮಯೂರ ಮೋರೆ, ಮಂಜುನಾಥ ಬಡಕೋರೆ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ ರಂಜನ್, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜಕುಮಾರ ತ್ರೀಪಾಠಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಯಶಪಾಲ ಕ್ಷೀರಸಾಗರ, ಮಹಾನಗರ ಪಾಲಿಕೆಯ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಸಾಲುಮರದ ತಿಮ್ಮಕ್ಕನವರ ಪ್ರತಿನಿಧಿ ಶಿವಪ್ಪ ಬಾರ್ಕಿ, ಆರ್‍ಎಫ್‍ಓ ಆರ್.ಎಸ್.ಉಪ್ಪಾರ ಸೇರಿದಂತೆ ವಿವಿಧ ಅಧಿಕಾರಿಗಳು, ಅರಣ್ಯ ಪಾಲಕರು, ನವಲೂರು ಗ್ರಾಮದ ಜನಪ್ರತಿನಿಧಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button