ಸ್ಥಳೀಯ ಸುದ್ದಿ

ಉಪ್ಪಿನ ಬೆಟಗೇರಿಯಲ್ಲಿ ಅಪಾರ ಜನ ಬೆಂಬಲದೊಂದಿಗೆ ಪಾದಯಾತ್ರೆ ನಡೆಸಿದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ

ಧಾರವಾಡ

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದೇ ಕ್ಷೇತ್ರವನ್ನು 2018ರಲ್ಲಿ ಪ್ರತಿನಿಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಅವರಿಗೆ ಕ್ಷೇತ್ರದಲ್ಲಿ ಮತ್ತೊಂದು ಬಾರಿ ಅಪಾರ ಜನಬೆಂಬಲ ವ್ಯಕ್ತವಾಗಿದೆ.

ಭಾನುವಾರ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಮುಖ ನಿರ್ಣಾಯಕ ಗ್ರಾಮವಾಗಿರುವ ಉಪ್ಪಿನ ಬೆಟಗೇರಿಯಲ್ಲಿ ಅಮೃತ ದೇಸಾಯಿ ಅವರು ಬೃಹತ್ ಪಾದಯಾತ್ರೆ ನಡೆಸಿದರು. ಗ್ರಾಮದ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡು ಅಮೃತ ದೇಸಾಯಿ, ಅಲ್ಲಿಂದ ಅಪಾರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸುವ ಮೂಲಕ ಮತಯಾಚನೆ ಮಾಡಿದರು. ಅಮೃತ ದೇಸಾಯಿ ಅವರಿಗೆ ಮಾಜಿ ಶಾಸಕಿ ಸೀಮಾ ಮಸೂತಿ, ಗಂಗಾಧರ ಪಾಟೀಲ ಕುಲಕರ್ಣಿ, ಸಂಗನಗೌಡ ರಾಮನಗೌಡರ, ಚನ್ನಬಸಪ್ಪ ಮಸೂತಿ, ಅಶೋಕ ಮಸೂತಿ, ಶಶಿಕಲಾ ಮಸೂತಿ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.

ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ಅಮೃತ ದೇಸಾಯಿ ಅವರಿಗೆ ಜಯಘೋಷಗಳನ್ನು ಹಾಕಿದರು. ಮನೆ ಮನೆಗೆ ಭೇಟಿ ನೀಡಿದ ಅಮೃತ ದೇಸಾಯಿ ಅವರು ತಮ್ಮ ಪ್ರಣಾಳಿಕೆ ಪತ್ರವನ್ನು ನೀಡಿ ಮತಯಾಚನೆ ಮಾಡಿದರು. ಉಪ್ಪಿನ ಬೆಟಗೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಸಂಚರಿಸಿ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು.

ಒಟ್ಟಾರೆ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಅಮೃತ ದೇಸಾಯಿ ಅವರು ಬೃಹತ್ ಪಾದಯಾತ್ರೆ ಮಾಡುವ ಮೂಲಕ ಮತಬೇಟೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button